ಕಪ್ಪೆಯು ತಾನಿರುವ ನೀರನ್ನೆಂದೂ ಮಲಿನಗೊಳಿಸುವುದಿಲ್ಲ (ಸಂಪಾದಕೀಯ)

ಯಾದಗೆರೆಯ ಕಲುಷಿತ ಕೊಳವೆಬಾವಿ ನೀರು (ಚಿತ್ರ - ಭೂಷಣ್ ಮಿಡಿಗೇಶಿ)

ಇಂದಿನ ನೀರಿನ ಕೊರತೆಗೆ ಬಹು ಮುಖ್ಯ ಕಾರಣ ನಮ್ಮ ನೀರು ನಿರ್ವಹಣೆಯಲ್ಲಿನ ವೈಫಲ್ಯ. ವರದಿಯೊಂದರ ಪ್ರಕಾರ ಮುಂದಿನ ೨೦ ವರ್ಷಗಳಲ್ಲಿ ಏಷ್ಯಾದ ಬಹುತೇಕ ನದಿಗಳ ನೀರು ಕಲ್ಮಶಗೊಳ್ಳುತ್ತದೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಅದೇನೂ ಉತ್ಪ್ರೇಕ್ಷೆಯಲ್ಲ ಎನಿಸುತ್ತದೆ. ನಾವು ನಮ್ಮ ಜಲಮೂಲಗಳನ್ನು ಹಾಳು ಮಾಡುತ್ತಿರುವ ಪರಿಯನ್ನು ಗಮನಿಸಿದರೆ ನಮಗಾರಿಗೂ ನೀರಿನ ಅಮೂಲ್ಯತೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದಿರುವುದು ಢಾಳಾಗಿ ಗೋಚರಿಸುತ್ತದೆ. ನಮ್ಮೆಲ್ಲಾ ತ್ಯಾಜ್ಯಗಳನ್ನು ಸುರಿಯಲು ನಮಗೆ ಕಾಣುವ ಏಕೈಕ ಸ್ಥಳಗಳೆಂದರೆ ನದಿಗಳು, ಕೆರೆಗಳು, ಬಾವಿಗಳು ಅಥವಾ ಇನ್ನಿತರೆ ಜಲಮೂಲಗಳು.

ಈ ವಿಷಯದಲ್ಲಿ ನಗರಗಳ ಪಾಲು ಬಹುದೊಡ್ಡದು. ಅವರಿಗೆ ಶುದ್ಧವಾದ ನದಿ ನೀರು ಬೇಕು. ಅದು ಎಷ್ಟು ದೂರವಿದ್ದರೂ ಸರಿ ತರಿಸುತ್ತಾರೆ, ಮನಸೋ ಇಚ್ಚೆ ಬಳಸುತ್ತಾರೆ. ಆದರೆ ತಮ್ಮೆಲ್ಲಾ ಕಲ್ಮಶಗಳನ್ನು ನದಿ, ಕೆರೆಗಳಿಗೆ ತುಂಬಿಸಿ ಗ್ರಾಮೀಣ ಪ್ರದೇಶಗಳಿಗೆ ರವಾನಿಸುತ್ತಾರೆ. ಬೆಂಗಳೂರಿನ ಉದಾಹರಣೆಯನ್ನೇ ನೋಡಿ. ಅವರಿಗೆ ಕಾರು ತೊಳೆಯಲೂ ಸಹ ಕಾವೇರಿ ನೀರೇ ಬೇಕು,     ಆದರೆ ಅವರ ಕಲ್ಮಶದ ಕರ್ಮವನ್ನು ಅನುಭವಿಸುವವರು ನಗರದ ಸುತ್ತ-ಮುತ್ತಲ ದೊಡ್ಡಬಳ್ಳಾಪುರ, ನೆಲಮಂಗಲ, ಕನಕಪುರ ಇತ್ಯಾದಿ ಗ್ರಾಮೀಣ ಕೃಷಿ ಪ್ರದೇಶಗಳು.

ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ, ಉದ್ಯಾನಗಳ ನಗರ ಮುಂತಾದ ವಿಶೇಷಗಳೆಲ್ಲಾ ಅಲ್ಲಿನ ವೃಷಭಾವತಿ ನದಿಯ ದುರವಸ್ಥೆಯನ್ನು ನೋಡಿದರೆ ಶುದ್ಧ ಸುಳ್ಳು ಎನಿಸುತ್ತದೆ. ಇವರ ಕೊಳಕುತನದ ಫಲಾನುಭವಿಗಳು ಬಿಡದಿ, ಬೈರಮಂಗಲ ಸುತ್ತ-ಮುತ್ತಲ ಹಳ್ಳಿಗರು. ಇದರ ಆಸು-ಪಾಸು ಯಾರೂ ವಿಷಮುಕ್ತವಾಗಿ ಬದುಕುವಂತೆಯೇ ಇಲ್ಲ. ಅಲ್ಲಿನ ಗಾಳಿ, ನೀರು, ಮಣ್ಣು ಮತ್ತು ಒಟ್ಟಾರೆ  ವಾತಾವರಣವೇ ಕಲುಷಿತ.
 
ಈ ಕುರಿತು ಅಭಿವೃದ್ಧಿ ಬರಹಗಾರರಾದ ಕೆ.ರೇಖಾ ಸಂಪತ್‌ರವರು ಗಮನ ಸೆಳೆಯುವ ಲೇಖನವೊಂದನ್ನು ಈ ಸಂಚಿಕೆಗೆ ಬರೆದಿದ್ದಾರೆ. ಲೇಖನಕ್ಕಾಗಿ ಅವರು ಇಡೀ ನದಿ ಪಾತ್ರದಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿದ್ದಾರೆ, ರೈತರು ಮತ್ತು ವೈದ್ಯರನ್ನು ಸಂದರ್ಶಿಸಿದ್ದಾರೆ. ಅವರ ಅಣ್ಣ ಮತ್ತು ಪತಿಯನ್ನೂ ಸಹ ಇದರಲ್ಲಿ ತೊಡಗಿ ಪರಿಪೂರ್ಣ ಲೇಖನ ಬರೆಯಲು ಶ್ರಮ ಹಾಕಿದ್ದಾರೆ. ಪತ್ರಿಕೋದ್ಯಮದಲ್ಲಿ ಅವರ ಶ್ರದ್ಧೆ, ತನ್ಮಯತೆ ಪ್ರಶಂಸನೀಯ.
 
*   *   *

ನಗರಗಳನ್ನು ಬಿಟ್ಟರೆ ನೀರಿನ ಮಲಿನತೆಗೆ ಬಹುದೊಡ್ಡ ಕೊಡುಗೆ ಕಾರ್ಖಾನೆಗಳದ್ದು. ಘನ ತ್ಯಾಜ್ಯ ನಿರ್ವಹಣೆಯ ಕಾನೂನುಗಳನ್ನೆಲ್ಲಾ ಗಾಳಿಗೆ ತೂರಿರುವ ಇವುಗಳಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೇ ಇಲ್ಲ. ತಮ್ಮ ಕಾರ್ಖಾನೆಯ ವ್ಯಾಪ್ತಿಯಲ್ಲೇ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕಾದ ಇವರು ಅದನ್ನು ಡೀಲರ್‌ಗಳಿಗೆ ಮಾರುತ್ತಾರೆ. ಹಣದಾಸೆಯ ದೂರ್ತ ಡೀಲರ್ ಇದನ್ನು ಮತ್ತಾರಿಗೋ ಕೊಟ್ಟು ಕೈತೊಳೆದುಕೊಳ್ಳುತ್ತಾನೆ. ಅದನ್ನು ಪಡೆಯುವವ ಪುಡಿಗಾಸಿಗಾಗಿ ಅದನ್ನು ಸಿಕ್ಕ-ಸಿಕ್ಕಲ್ಲಿ ಸುರಿಯುತ್ತಾನೆ. ಅದರಿಂದಾಗುವ ಹಾನಿಯ ಕಿಂಚಿತ್ ಅರಿವೂ ಈ ಮೂರ್ಖರಿಗಿರುವುದಿಲ್ಲ. ಇದ್ದರೂ  ಅದಕ್ಕೆ ತಲೆಕೆಡಿಸಿಕೊಳ್ಳುವ ಮಂದಿ ಇವರಲ್ಲ.

ಇದಕ್ಕೆ ಅತ್ಯುತ್ತಮ ಉದಾಹರಣೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಯಾದಗೆರೆ. ಬೇಜವಾಬ್ದಾರಿ ಕಾರ್ಖಾನೆಗಳು ತಂದೊಡ್ಡುವ ಅಪಾಯದ ಬಗ್ಗೆ ಒಂದು ಚಿತ್ರಣ ಅಲ್ಲಿ ಲಭ್ಯ. ಇಲ್ಲಿನ ಕೃಷಿಕರೊಬ್ಬರ ಜಮೀನಿನಲ್ಲಿ ರಾತ್ರೋ ರಾತ್ರಿ ಲೋಡುಗಟ್ಟಲೆ ಕಾರ್ಖಾನೆ ತ್ಯಾಜ್ಯವನ್ನು ತಂದು ಸುರಿದ ಪರಿಣಾಮ ಅಲ್ಲಿನ ಇಬ್ಬರು ರೈತರ ಕೊಳವೆ ಬಾವಿ ನೀರು ವಿಷಮಯವಾಗಿದೆ. ೨೦೦೩ರಲ್ಲಿ ಹಿಂದೆ ಅಲ್ಲಿನ ತಿಮ್ಮಪ್ಪ ಎಂಬುವರ ಹೊಲದಲ್ಲಿ ಐದಾರು ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿ ಅವುಗಳಲ್ಲಿ ಕಾರ್ಖಾನೆ ತ್ಯಾಜ್ಯ ತುಂಬಲಾಗಿತ್ತು. ಪಾಂಡಿಚೇರಿ, ಮಾಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಿಂದ ವಿಷಕಾರಿ ತ್ಯಾಜ್ಯವನ್ನು ಗುತ್ತಿಗೆಗೆ ಪಡೆದು, ನಮ್ಮ ರೈತರಿಗೆ ಚಿಕ್ಕಾಸು ನೀಡಿ, ಅವರ ಹೊಲದಲ್ಲಿ ತುಂಬುವ ಜಾಲದ ಕೆಲಸ ಇದು.

ಹೀಗೆ ತ್ಯಾಜ್ಯ ಸುರಿದ ಪರಿಣಾಮ ಪಕ್ಕದಲ್ಲಿರುವ ನರಸಪ್ಪ ಮತ್ತು ನರಸಿಂಹಮೂರ್ತಿಯವರ ಹೊಲದ ಕೊಳವೆ ಬಾವಿಯ ನೀರು ವಿಷಮಯವಾಗಿ ಅವರ ಬದುಕು ನೆಲಕಚ್ಚಿದೆ.  ಹೊಂಡಗಳಲ್ಲಿರುವ ತ್ಯಾಜ್ಯ ಹೊರತೆಗೆಯದ ಹೊರತು ಪರಿಸ್ಥಿತಿ ಸುಧಾರಿಸದು. ಹೊರತೆಗೆದರೂ ಕೂಡ ಕೊಳವೆ ಬಾವಿಯ ನೀರು ತಿಳಿಯಾಗಲು ಇನ್ನೂ ಅನೇಕ ವರ್ಷ ಬೇಕು. ಇದೇ ರೀತಿಯ ಇನ್ನೊಂದು ಪ್ರಕರಣ ಚಾಮರಾಜನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ.
 
ಕೈಗಾರಿಕೆಗಳು, ಗುತ್ತಿಗೆ ಕೃಷಿ, ವಿಶೇಷ ಆರ್ಥಿಕ ವಲಯಗಳು ಬೆಳೆಯುತ್ತಿರುವ ಪರಿಯನ್ನು ನೋಡಿದರೆ ನಮ್ಮ ನೀರು, ಮಣ್ಣು ಮತ್ತು ಅದನ್ನು ನಂಬಿಕೊಂಡ ಕೃಷಿಕನಿಗೆ ಉಳಿಗಾಲವಿಲ್ಲ ಎನಿಸುತ್ತದೆ.

ಮಲ್ಲಿಕಾರ್ಜುನ ಹೊಸಪಾಳ್ಯ

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
6 + 14 =
Solve this simple math problem and enter the result. E.g. for 1+3, enter 4.