ಅಯ್ಯನ ಕೆರೆಯ ನೀರಿನ ಪಾಠ
"ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ - ಬೆಳಗಾಂ, ಬಿಜಾಪುರ, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ ನೀರಿನ ಅಭಾವ ಎದುರಿಸಲಿಕ್ಕಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಮತ್ತು ಟ್ಯಾಂಕರುಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ರಾಜ್ಯ ಸರಕಾರ ರೂಪಾಯಿ ೨೧೧ ಕೋಟಿ ಬಿಡುಗಡೆ ಮಾಡಿದೆ" - ಇದು ೨೭ ಮಾರ್ಚ್ ೨೦೦೯ರಂದು ಕರ್ನಾಟಕದ ಹಲವು ವಾರ್ತಾಪತ್ರಿಕೆಗಳಲ್ಲಿ ಮುಖಪುಟ ಸುದ್ದಿ.
"ರಾಜ್ಯದ ೪೫ ಹಳ್ಳಿಗಳಿಗೆ ಟ್ಯಾಂಕರುಗಳಲ್ಲಿ ಕುಡಿಯುವ ನೀರು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ" ಎಂಬ ಸುದ್ದಿ ಓದುತ್ತಿದ್ದಂತೆ ೫ ವರುಷಗಳ ಮುಂಚಿನ ಒಂದಿನ ನೆನಪಾಯಿತು.ಅಂದು ೨೭ ಫೆಬ್ರವರಿ ೨೦೦೪. ಬಿಸಿಲು ಚುರುಕಾಗಿತ್ತು. ಬೆಳಗ್ಗೆ ೯ರ ಹೊತ್ತಿಗೆ ಕಡೂರು ಹತ್ತಿರದ ಬಿಳೇಕಲ್ಲು ಹಳ್ಳಿಗೆ ಹೋಗಿದ್ದಾಗ, ಹಳ್ಳಿಯ ಕೆಲವರು ಎತ್ತಿನ ಗಾಡಿಗಳಲ್ಲಿ ಬಟ್ಟೆ ಹೇರಿಕೊಂಡು ಹೊರಟಿದ್ದರು, "ಇದೇನು ಗುಳೇ ಹೊರಟಿದ್ದಾರಾ?" ಎಂದು ಕೇಳಿದೆ, ಶಾಲಾ ಮಾಸ್ಟರ್ ಪಾಂಡುರಂಗಪ್ಪನವರನ್ನು. "ಇಲ್ಲ ಸಾರ್, ಬಟ್ಟೆ ಒಗೀಲಿಕ್ಕೆ ಅಯ್ಯನ ಕೆರೆಗೆ ಹೊರಟಿದ್ದಾರೆ" ಎಂದರು.
"ಅಲ್ಲಿಂದ ಕಾಲುವೇಲಿ ನಿಮ್ ಹಳ್ಳಿಗೆ ನೀರು ಬರಾಕಿಲ್ವಾ?" ಎಂಬ ನನ್ನ ಪ್ರಶ್ನೆಗೆ ಅವರ ಉತ್ತರ, "ಅಯ್ಯೋ, ಆ ಕಾಲ ಹೋಯ್ತು. ಕಾಲುವೇಲಿ ನೀರ್ ಬಿಡೋದು ಬಂದ್ ಮಾಡ್ಯಾರೆ. ಈಗ ಅಯ್ಯನ ಕೆರೆ ನೀರು ಏನಿದ್ರೂ ಜನರಿಗೆ ಬಟ್ಟೆ ಒಗೀಲಿಕ್ಕೆ ಮತ್ತು ಜಾನುವಾರುಗಳಿಗೆ ಕುಡೀಲಿಕ್ಕೆ ಮಾತ್ರ. ನಾನು ಹುಟ್ಟಿದ್ಮೇಲೆ ಹಿಂಗಾಗಿದ್ದು ಇದೇ ಮೊದಲು".
ಚಿಕ್ಕಮಗಳೂರಿನಿಂದ (ಕಡೂರಿನ ದಿಕ್ಕಿನಲ್ಲಿ) ೨೩ ಕಿಮೀ ದೂರದಲ್ಲಿದೆ ಬಿಳೇಕಲ್ಲು ಹಳ್ಳಿ. ಅಲ್ಲಿ ೪೫೦ ಮನೆಗಳು. ಹಳ್ಳಿಯ ಹಿರಿಯ ತಿಮ್ಮೇ ಗೌಡರಿಗೆ ಅಯ್ಯನಕೆರೆ ಹತ್ತಿರದಲ್ಲಿ ೬ ಎಕರೆ ಅಡಿಕೆ ತೋಟ. ತುಸು ದೂರದಲ್ಲಿ ಬೇರೆ ೧೬ ಎಕರೆ ಅಡಿಕೆ ತೋಟ. ಅವರ ಮಗ ಹೊನ್ನೇಗೌಡರಿಗೆ ತೋಟದ ಸ್ಠಿತಿ ಹೇಳ್ತಾ ಹೇಳ್ತಾ ಗಂಟಲು ಕಟ್ಟಿ ಬಂತು. "ಅಯ್ಯನ ಕೆರೆಯಿಂದ ಕಾಲುವೇಲಿ ನೀರು ಬರ್ತಿತ್ತು. ಹಿಂಗಾಗ್ತದೆ ಅಂತ ಯಾರಿಗೆ ಗೊತ್ತಿತ್ತು? ಒಂದೋ ತೋಟ ಉಳೀಬೇಕು, ಇಲ್ದಿದ್ರೆ ನಾವು ಹೋಗ್ಬೇಕು ಅಂತ ಹನ್ನೆರಡು ಬೋರ್ ವೆಲ್ ಹೊಡೆಸಿದ್ವಿ. ಏಳು ಬೋರ್ ವೆಲ್ ನಾಗೆ ನೀರು ಸಿಕ್ತು. ಆದ್ರೆ ಕರೆಂಟೇ ಇರೋದಿಲ್ಲ. ನಾಲ್ಕು ಜನರೇಟರ್ ಇಟ್ಕೊಂಡು ಪಂಪ್ ನಡೆಸಿ ನೀರು ಹೊಡೀತಾ ಇದೀವಿ. ದಿನಕ್ಕೆ ೪೦೦೦ ರೂಪಾಯಿ ಡೀಸಿಲ್ ಗೇ ಬೇಕು. ನಮ್ ಪರಿಸ್ಥಿತಿ ಕೇಳಬ್ಯಾಡ್ರಿ." ಬಿಳೇಕಲ್ಲು ಹಳ್ಳಿಯಲ್ಲಿ ಯಾರನ್ನು ಕೇಳಿದರೂ ಇಂತಹದೇ ಗೋಳಿನ ಕತೆಗಳು.
ಅಲ್ಲಿಂದ ನೇರವಾಗಿ ಅಯ್ಯನ ಕೆರೆಗೆ ಹೋದೆವು. ಅಲ್ಲಿ ಕಂಡದ್ದೇನು? ದಕ್ಷಿಣ ಭಾರತದ ಬೃಹತ್ ಕೆರೆಗಳಲ್ಲಿ ಒಂದಾದ ಅಯ್ಯನ ಕೆರೆ ಅಂದು ಪುಟ್ಟ ಈಜುಕೊಳದಂತಿತ್ತು. ಕಳೆದ ನೂರು ವರುಷಗಳಲ್ಲಿ ಭೀಕರ ಬರಗಾಲಗಳು ಬಂದಿದ್ದಾಗಲೂ ಈ ಕೆರೆಯಲ್ಲಿ ನೀರಾವರಿಗೂ ನೀರಿತ್ತು. ೩,೯೦೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ೪ ಕಾಲುವೆಗಳಿಂದ ನೀರುಣಿಸಲು ತೊಂದರೆ ಆದದ್ದು ಅಪರೂಪ. ಅಂತಹ ಅಯ್ಯನ ಕೆರೆಯಲ್ಲಿ ಅಂದು ಒಂದಾಳೆತ್ತರದ ನೀರು!
ಅಯ್ಯನ ಕೆರೆಯ ಏರಿ ಇಳಿದು ವಾಹನದಲ್ಲಿ ಸಖರಾಯಪಟ್ಟಣ ತಲಪಿದಾಗ ನಡು ಮಧ್ಯಾಹ್ನ ೧೨ ಗಂಟೆ. ವಾಹನದಲ್ಲಿದ್ದ ನಾವು ಯಾರೂ ಹಾದಿಯುದ್ದಕ್ಕೂ ಮಾತಾಡಲಿಲ್ಲ. ಹಾದಿಯ ಅಕ್ಕಪಕ್ಕದಲ್ಲಿ ನೀರಿನ ಪಸೆಯಿಲ್ಲದೆ ಬಣಗುಟ್ಟುವ ಅಡಿಕೆ ತೋಟಗಳನ್ನು ಕಂಡು ನಮ್ಮ ಬಾಯಿಯ ಪಸೆ ಒಣಗಿತ್ತು. ಸಖರಾಯಪಟ್ಟಣದಲ್ಲಿ ಹಲವು ಮನೆಗಳೆದುರು ನೀರು ಸಂಗ್ರಹಿಸಿಟ್ಟ ಪ್ಲಾಸ್ಟಿಕ್ ಟ್ಯಾಂಕ್ ಗಳು. ಅವುಗಳ ಮುಚ್ಚಳಕ್ಕೆ ಬೀಗ ಹಾಕಲಾಗಿತ್ತು. ಯಾಕೆಂದರೆ ಒಂದು ಕಾಲದಲ್ಲಿ ಭಾರೀ ನೀರಿದ್ದ ಆ ಊರಿನಲ್ಲಿ ಇಂದು ನೀರಿಟ್ಟುಕೊಂಡರೆ ಕಳ್ಳಕಾಕರ ಭಯ. "ಒಂದು ಟ್ಯಾಂಕರಿಗೆ ೧೭೫ ರೂಪಾಯಿ ಕೊಟ್ಟು ನೀರು ತರಿಸ್ತಿದ್ದಾರೆ" ಎಂದರು ಮುರಳಿ.
ಅಲ್ಲಿಂದ ನಾವು ಹೊರಟಾಗ, ವಕೀಲ ಎಸ್ ಎಲ್ ಬೋಜೇಗೌಡರೊಂದು ಮಾತು ಹೇಳಿದರು, "ಏನೇ ಹೇಳಿ. ನಮಗೆಲ್ಲ ನೀರಿಲ್ಲದೆ ಸಂಕಟವಾಗಿದೆ, ನಿಜ. ಆದರೆ ಈಗ ನಮಗೆ ನೀರಿನ ಬೆಲೆ ಗೊತ್ತಾಗಿದೆ. ಅಯ್ಯನ ಕೆರೆಯಿಂದ ಕಾಲುವೇಲಿ ತೋಟಗಳಿಗೆ ನೀರು ಬಿಡ್ತಿದ್ರು. ಅವರವರ ತೋಟಕ್ಕೆ ನೀರು ಕಟ್ಟಿಕೊಂಡ ಮೇಲೆ ಪಕ್ಕದವರಿಗೆ ಹೇಳಬೇಕಿತ್ತು,"ನಂದಾಯ್ತು, ಇನ್ನು ನೀನು ನೀರು ಕಟ್ಟಿಕೋ" ಅಂತ. ಆದ್ರೆ ಜನ ತಮ್ಮ ಪಾಡಿಗೆ ತಾವು ಹೊರಟು ಹೋಗ್ತಿದ್ರು. ಕಾಲುವೆ ನೀರು ರಾತ್ರಿಯಿಡೀ ಹಾಳಾಗಿ ಹೋಗ್ತಿತ್ತು. ಆಗ ಪೋಲು ಮಾಡಿದ ನೀರು ಈಗ ಬೇಕು ಅಂದ್ರೆ ಸಿಕ್ತದಾ?"
ಅಯ್ಯನ ಕೆರೆಯಂತಹ ಸಾವಿರಾರು ಕೆರೆಗಳು ನಮಗೆ ನೀರಿನ ಪಾಠ ಹೇಳುತ್ತಿವೆ. ಆದರೆ ನಾವು ಪಾಠ ಕಲಿಯುವುದು ಯಾವಾಗ?
- ಅಡ್ಡೂರು ಕೃಷ್ಣ ರಾವ್
- 1345 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
2 weeks 4 days ago - Re: ಇಲ್ಲಿ ‘ಕೊಳಚೆ ನೀರು ...
3 weeks 4 days ago - Re: ‘ಇರುವೆ’; ಅಂತರ್ಜಲ ...
12 weeks 2 days ago - Re: ನಮ್ಮ ಮನೆಯ ತಾರಸಿ ಮೇಲೆ ...
12 weeks 5 days ago - Re: ‘ಕುಡಿಯಲು ಬಿಲ್ಕುಲ್ ...
15 weeks 2 days ago - Re: ಧಾರವಾಡದ ನೆಲ ನುಂಗಿ; ...
16 weeks 4 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 6 days ago - Re: ದೇಸಿ ತಂತ್ರಜ್ಞಾನದಿಂದ ...
18 weeks 3 days ago - Re: ಧಾರವಾಡದ ಮೂಕಾಂಬಿಕಾ ...
22 weeks 6 days ago - Re: ಮಳೆ ಎಂದರೆ ಬಾಲ್ಯದ ...
23 weeks 5 days ago
| Subscribe to IWP Kannada list |
| Visit this group |










ಬಿಜೆಪಿ ಪ್ರಣಾಳಿಕೆಯ ಕನ್ನಡ ಆವೃತ್ತಿ ಹಾಗೂ ಪೂರಕ ಪ್ರಣಾಳಿಕೆ ಬಿಡುಗಡೆ----
----------------------------------------------------------------------
ಲೋಕಸಭಾ ಚುನಾವಣೆ-೨೦೦೯ರ ಬಿಜೆಪಿ ಪ್ರಣಾಳಿಕೆಯ ಕನ್ನಡ ಆವೃತ್ತಿ ಹಾಗೂ ಪೂರಕ ಪ್ರಣಾಳಿಕೆಯನ್ನು ಪಕ್ಷದ ಚುನಾವಣಾ ಕಛೇರಿಯಲ್ಲಿ ಇಂದು ಬಿಡುಗಡೆ ಮಾಡಲಾಯಿತು.
ಪ್ರಣಾಳಿಕೆಯ ಕನ್ನಡ ಆವೃತ್ತಿ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಡಿ.ವಿ.ಸದಾನಂದಗೌಡ, ಹಿಂದಿನ ಎನ್.ಡಿ.ಎ. ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಬಹುತೇಕ ಈಡೇರಿಸಿದೆ.
Visit to --http.bjpkarnataka.org
Munche ayyana kere bayalalli bhattada gadde gaLe idvu... ello allondu illondu adike toda idvu... iga poorti ulta. ellarigu besigeyalli niru beku andre ellinda sigutte?
ಪ್ರಿಯರೇ,
ಎಲ್ಲಿಂದ ಎಲ್ಲಿಗೆ ಬಂದಿದೆ! ೨೦೦೨-೨೦೦೩ರ ಕಾಲದಲ್ಲಿ, ನೀರಿಗೆ ಹಾಹಾಕಾರ ಇದ್ದಾಗ, ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ
ಚಾರ್ಮಾಡಿ ಘಾಟಿನ್ ಅಣ್ಣಪ್ಪ ಸ್ವಾಮಿ ಆಲಯದಿಂದ ಕಡೂರು- ಬೀರೂರಿಗೆ ಕನ್ ಟೈನ್ ರ್ ಗಳಲ್ಲಿ ನೀರು ಒಯ್ಯುತ್ತಿದ್ದದ್ದನ್ನು
ಕಂಡಿದ್ದೇನೆ.
- ಅಡ್ಡೂರ್
Post new comment